ಸೆಮಿಕಂಡಕ್ಟರ್ ಪ್ಲ್ಯಾಂಟ್ ನಿರ್ಮಾಣ ಕಂಪನಿ ಜೊತೆ ಸರ್ಕಾರ ಒಪ್ಪಂದ | JANATA NEWS
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ 22,900 ಕೋಟಿ ರೂ.ಗಳ ( 3 ಬಿಲಿಯನ್ ಡಾಲರ್) ಹೂಡಿಕೆಯ ದೇಶದ ಮೊತ್ತ ಮೊದಲ ಪ್ರತಿಷ್ಠಿತ ಸೆಮಿಕಂಡಕ್ಟರ್ ಪ್ಲಾಂಟ್ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಹಾಗೂ ಐಎಸ್ಎಂಸಿ ಅನಲಾಗ್ ಫ್ಯಾಬ್ ಪ್ರೈ.ಲಿ ನಡುವೆ ಒಪ್ಪಂದಕ್ಕೆ ಇಂದು ಸಹಿ ಹಾಕಲಾಯಿತು.
ರಾಜ್ಯ ಸರ್ಕಾರದ ಪರವಾಗಿ ಕೈಗಾರಿಕೆ ಇಲಾಖೆಯ ಎಸಿಎಸ್ ಡಾ.ರಮಣರೆಡ್ಡಿ ಮತ್ತು ISMC ಅನಲಾಗ ಫ್ಯಾಬ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಿರ್ದೇಶಕ ಅಜಯ ಜಲನ್ ಒಡಂಬಡಿಕೆ ಪತ್ರಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಸಹಿ ಹಾಕಲಾಯಿತು. ಹಾಗೂ ಒಡಂಬಡಿಕೆ ಪತ್ರವನ್ನು ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಪರಸ್ಪರ ವಿನಿಮಯ ಮಾಡಿಕೊಳ್ಳಲಾಯ್ತು.
ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಮತ್ತು ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಸಿಎಂ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, ಐಟಿ ಬಿಟಿ ನಿರ್ದೇಶಕಿ ಮೀನಾ ನಾಗರಾಜ, ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ನಾವರ್ ಗಿಲೋನ್, ಇರೇಜ್ ಇಂಬರಮನ್ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೆಮಿಕಂಡಕ್ಟರ್ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮತ್ತು ಐ.ಎಸ್.ಎಂ.ಸಿ ಅನಲಾಗ್ ಫ್ಯಾಬ್ ಪ್ರೈ.ಲಿ. ಸಂಸ್ಥೆ ಪರಸ್ಪರ ಮಾಡಿಕೊಂಡಿರುವ ಒಪ್ಪಂದವು ವಿಶ್ವದ ಸೆಮಿಕಂಡಕ್ಟರ್ ನಕ್ಷೆಯಲ್ಲಿ ಕರ್ನಾಟಕವನ್ನು ಗುರುತಿಸುವಂತೆ ಮಾಡಲಿದೆ ಎಂದು ತಿಳಿಸಿದರು.
ವಿವಿಧ ರಾಜ್ಯಗಳು ಸೆಮಿಕಂಡಕ್ಟರ್ ಫ್ಯಾಬ್ ಹೂಡಿಕೆಗಳನ್ನು ಆಕರ್ಷಿಸಲು ಸ್ಪರ್ಧಿಸುತ್ತಿದ್ಧ ವೇಳೆಯಲ್ಲಿಯೇ ಈ ಮಹತ್ವದ ಒಪ್ಪಂದಕ್ಕೆ ಕರ್ನಾಟಕ ಸರ್ಕಾರ ಸಹಿ ಹಾಕಿದೆ. ಕೇವಲ ಆರ್ಥಿಕ ಪ್ರೋತ್ಸಾಹಕಗಳು ಮಾತ್ರವಲ್ಲದೆ, ಒಟ್ಟಾರೆ ಕಾರ್ಯನಿರ್ವಹಣೆಗೆ ಅಗತ್ಯವಿರುವ ವಾತಾವರಣವನ್ನು ನಿರ್ಮಿಸುವುದೂ ಮುಖ್ಯ ಎನ್ನುವುದನ್ನು ಕರ್ನಾಟಕ ಸರ್ಕಾರ ಅರಿತಿದೆ. ದೇಶದಲ್ಲಿಯೇ ಅತ್ಯುತ್ತಮ ಮೂಲಭೂತ ಸೌಕರ್ಯ ಹಾಗೂ ಕೌಶಲ್ಯಯುತ ಮಾನವ ಸಂಪನ್ಮೂಲವನ್ನು ಹೊಂದಿದೆ ಎಂದು ಅವರು ಹೇಳಿದರು.
ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರದ ಸೆಮಿಕಂಡಕ್ಟರ್ ಮಿಷನ್ ನ್ನು ಅನುಮೋದಿಸಿರುವುದರಿಂದ ಸೆಮಿಕಂಡಕ್ಟರ್ ವಲಯದಲ್ಲಿ ಕರ್ನಾಟಕ ಮುಂದುವರೆಯಲು ಸಾಧ್ಯವಾಗಿದೆ ಎಂದರು.